ಆಂಧ್ರ ಪ್ರದೇಶದ ರಾಯದುರ್ಗ ಮತ್ತು ತುಮಕೂರು ಜಿಲ್ಲೆಯನ್ನು ಸಂಪರ್ಕಿಸುವ ನೂತನ ಪಾವಗಡ ರೈಲು ನಿಲ್ದಾಣ ಜನರ ಸೇವೆಗೆ ಸಿದ್ಧವಾಗಿದೆ. ಹಲವು ದಶಕಗಳಿಂದ ಜನರು ನಿರೀಕ್ಷಿಸಿದ್ದ ಈ ರೈಲು ಮಾರ್ಗ ಯೋಜನೆ ಇದೀಗ ಪೂರ್ಣಗೊಂಡಿದ್ದು, ಸ್ಥಳೀಯರಲ್ಲಿ ಸಂತಸ ಮೂಡಿಸಿದೆ.
ಈ ಹೊಸ ರೈಲು ಸಂಪರ್ಕದಿಂದ ಬೆಂಗಳೂರು ಮತ್ತು ಬಳ್ಳಾರಿ ನಡುವಿನ ಪ್ರಯಾಣದ ದೂರವು ಗಮನಾರ್ಹವಾಗಿ ಕಡಿಮೆಯಾಗಲಿದ್ದು, ಪ್ರಯಾಣಿಕರ ಸಮಯ ಹಾಗೂ ವೆಚ್ಚ ಉಳಿತಾಯವಾಗಲಿದೆ ಎಂದು ಹೇಳಲಾಗುತ್ತಿದೆ.
ಸ್ಥಳೀಯರ ಪ್ರಕಾರ, ಈ ಯೋಜನೆ ಬಹುದಿನಗಳ ಬೇಡಿಕೆಯಾಗಿತ್ತು. ರೈಲ್ವೆ ಸಚಿವ ವಿ. ಸೋಮಣ್ಣ ಅವರ ಪ್ರಯತ್ನದಿಂದ ಕಾಮಗಾರಿ ವೇಗವಾಗಿ ಪೂರ್ಣಗೊಂಡಿದೆ ಎಂದು ಜನರು ಅಭಿಪ್ರಾಯಪಟ್ಟಿದ್ದಾರೆ.
ಯೋಜನೆ ಜಾರಿಯಾದ ನಂತರ ಬೆಂಗಳೂರು ಮತ್ತು ಬಳ್ಳಾರಿ ನಡುವಿನ ದೂರವು ಸುಮಾರು 100 ಕಿಲೋ ಮೀಟರ್ಗಳಷ್ಟು ಕಡಿಮೆಯಾಗಲಿದೆ ಎನ್ನಲಾಗಿದ್ದು, ನಿತ್ಯ ಸಾವಿರಾರು ಪ್ರಯಾಣಿಕರಿಗೆ ಇದರ ಪ್ರಯೋಜನ ಸಿಗಲಿದೆ.
ರೈಲು ನಿಲ್ದಾಣ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಪಾವಗಡ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ವ್ಯಾಪಾರ, ಸಾರಿಗೆ ಮತ್ತು ಉದ್ಯೋಗ ಚಟುವಟಿಕೆಗಳಿಗೆ ಹೊಸ ಉತ್ತೇಜನ ಸಿಗುವ ನಿರೀಕ್ಷೆ ವ್ಯಕ್ತವಾಗಿದೆ.
ಸ್ಥಳೀಯ ನಿವಾಸಿಗಳು ರೈಲು ಸೇವೆ ಆರಂಭವಾಗುತ್ತಿರುವುದರಿಂದ ವಿದ್ಯಾರ್ಥಿಗಳು, ಕಾರ್ಮಿಕರು ಹಾಗೂ ವ್ಯಾಪಾರಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.


