ನವದೆಹಲಿ: ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ 2025ರ ಮೇ ತಿಂಗಳಲ್ಲಿ ಸಂಭವಿಸಿದ ಭೂಕುಸಿತ ಪ್ರಕರಣಕ್ಕೆ ಸಂಬಂಧಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ರಾಷ್ಟ್ರೀಯ ಹಸಿರು ನ್ಯಾಯಪೀಠದ (NGT) ಮುಂದೆ ಮಹತ್ವದ ಪ್ರತಿಕ್ರಿಯೆ ಸಲ್ಲಿಸಿದೆ.
ಭೂಕುಸಿತವು “ದೇವರ ಕೃತ್ಯ” ಅಥವಾ ನೈಸರ್ಗಿಕ ವಿಕೋಪದಿಂದ ಸಂಭವಿಸಿರುವುದರಿಂದ ಕೃಷಿ ಭೂಮಿ ಮಾಲೀಕರಿಗೆ ಪರಿಹಾರ ಪಾವತಿಸಲು ತಾವು ಬಾಧ್ಯಸ್ಥರಲ್ಲ ಎಂದು ಪ್ರಾಧಿಕಾರ ಸ್ಪಷ್ಟಪಡಿಸಿದೆ.
ರಸ್ತೆ ಯೋಜನೆ ವಿರುದ್ಧ ರೈತರ ಆರೋಪ
ಶಕ್ರಾಲ ಗ್ರಾಮದಿಂದ ಢಲ್ಲಿವರೆಗೆ ನಾಲ್ಕು ಪಥದ ರಸ್ತೆ ವಿಸ್ತರಣಾ ಕಾಮಗಾರಿ ನಡೆಯುತ್ತಿದ್ದು, ಅದರ ಪರಿಣಾಮವಾಗಿ ಭೂಕುಸಿತ ಸಂಭವಿಸಿ ಕೃಷಿ ಭೂಮಿಗೆ ಹಾನಿಯಾಗಿದೆ ಎಂದು ಕೆಲ ಭೂ ಮಾಲೀಕರು NGTಗೆ ಅರ್ಜಿ ಸಲ್ಲಿಸಿದ್ದರು. ಪ್ರಾಧಿಕಾರ ಮತ್ತು ಅದರ ಗುತ್ತಿಗೆ ಏಜೆನ್ಸಿಗಳು ಇಳಿಜಾರಿನ ಪ್ರದೇಶವನ್ನು ಸರಿಯಾಗಿ ಬಲಪಡಿಸದೇ ಭಾರಿ ನಿರ್ಮಾಣ ಕಾಮಗಾರಿ ನಡೆಸಿದ್ದರಿಂದ ಭೂ ಕುಸಿತ ಸಂಭವಿಸಿದೆ ಎಂದು ಅವರು ಆರೋಪಿಸಿದ್ದರು.
NHAI ಪ್ರತಿಕ್ರಿಯೆ ಏನು?
ಮೇ 18ರಂದು ಸಲ್ಲಿಸಿದ ಪ್ರಮಾಣಪತ್ರದಲ್ಲಿ NHAI, 2025ರ ಮೇ 25ರಂದು ತಡೆಗೋಡೆಗೆ ಹಾನಿಯಾದ ಬಳಿಕ ಈ ಘಟನೆ ಸಂಭವಿಸಿದೆ ಎಂದು ತಿಳಿಸಿದೆ. ಆದರೆ ಇದು ಯಾವುದೇ ನಿರ್ಲಕ್ಷ್ಯದಿಂದ ಸಂಭವಿಸಿಲ್ಲ ಎಂದು ಪ್ರಾಧಿಕಾರ ವಾದಿಸಿದೆ.
“ಭಾರಿ ಮಳೆಯೇ ಕಾರಣ”
NHAI ಪ್ರಕಾರ ಹಿಮಾಚಲ ಪ್ರದೇಶದಲ್ಲಿ ಮೇ ಅಂತ್ಯದ ವೇಳೆಗೆ ಭಾರೀ ಮಳೆಯಾಗಿತ್ತು, ಅನೇಕ ಕಡೆಗಳಲ್ಲಿ ಭೂಕುಸಿತಗಳು ವರದಿಯಾಗಿದ್ದವು, ಯಾವುದೇ ಕಾಮಗಾರಿ ನಡೆಯದ ಪ್ರದೇಶಗಳಲ್ಲೂ ಭೂ ಕುಸಿತ ಸಂಭವಿಸಿತ್ತು ಹೀಗಾಗಿ ಈ ಘಟನೆ “Act of God” ವ್ಯಾಪ್ತಿಗೆ ಬರುತ್ತದೆ ಎಂದು ಹೇಳಿದೆ.
IMD ವರದಿ ಉಲ್ಲೇಖ
ಭಾರತೀಯ ಹವಾಮಾನ ಇಲಾಖೆ (IMD) ವರದಿ ಮತ್ತು ರಾಜ್ಯ ಸರ್ಕಾರ ಹೊರಡಿಸಿದ್ದ ವಿಪತ್ತು ಘೋಷಣೆ ತಮ್ಮ ವಾದಕ್ಕೆ ಬೆಂಬಲ ನೀಡುತ್ತದೆ ಎಂದು NHAI ತಿಳಿಸಿದೆ. ನೈಸರ್ಗಿಕ ವಿಕೋಪದಿಂದ ಹಾನಿ ಉಂಟಾದರೆ ಪ್ರಾಧಿಕಾರದ ಮೇಲೆ ಹೊಣೆಗಾರಿಕೆ ಹಾಕಲು ಸಾಧ್ಯವಿಲ್ಲ ಎಂಬುದನ್ನೂ ಉಲ್ಲೇಖಿಸಿದೆ.
ಮರಗಳ ಹಾನಿ ಬಗ್ಗೆ ವಿವಾದ
ಅರ್ಜಿದಾರರು 440 ಸೇಬು ಮರಗಳಿಗೆ ಹಾನಿಯಾಗಿದೆ, ₹32 ಲಕ್ಷಕ್ಕೂ ಹೆಚ್ಚು ನಷ್ಟವಾಗಿದೆ ಎಂದು ಆರೋಪಿಸಿದ್ದರು. ಆದರೆ ಯೋಜನೆ ಜಾರಿಗೊಳಿಸುತ್ತಿರುವ ಕಂಪನಿ ನಡೆಸಿದ ಮೌಲ್ಯಮಾಪನದಲ್ಲಿ ಅಲ್ಲಿ ಕೇವಲ 40 ಸೇಬು ಮರಗಳಷ್ಟೇ ಇದ್ದವು ಎಂದು NHAI ಪ್ರತಿಪಾದಿಸಿದೆ.
ಭೂ ಸ್ವಾಧೀನ ಪ್ರಕ್ರಿಯೆ
ಭೂ ಸ್ವಾಧೀನ ಕುರಿತು ಕೂಡ ಅರ್ಜಿದಾರರ ವಾದದಲ್ಲಿ ತಿರುಳಿಲ್ಲ ಎಂದು ಪ್ರಾಧಿಕಾರ ಹೇಳಿದೆ. ಈ ವರ್ಷದ ಜನವರಿಯಲ್ಲೇ ರಾಷ್ಟ್ರೀಯ ಹೆದ್ದಾರಿ ಕಾಯ್ದೆಯಡಿ ಅಧಿಸೂಚನೆ ಹೊರಡಿಸಲಾಗಿತ್ತು ಎಂದು ತಿಳಿಸಿದೆ.
ಪರಿಸರ ನಿಯಮ ಉಲ್ಲಂಘನೆ ಇಲ್ಲ
ತಮ್ಮ ಏಜೆನ್ಸಿಯಿಂದ ಯಾವುದೇ ಪರಿಸರ ಅಥವಾ ಅರಣ್ಯ ಅನುಮತಿ ಷರತ್ತು ಉಲ್ಲಂಘನೆಯಾಗಿಲ್ಲ ಎಂದು NHAI ಸ್ಪಷ್ಟಪಡಿಸಿದೆ. ಅರ್ಜಿದಾರರು ಭೂಕುಸಿತಕ್ಕೆ ಕಾರಣವಾದ ನಿರ್ದಿಷ್ಟ ನಿರ್ಲಕ್ಷ್ಯವನ್ನು ತೋರಿಸದೇ ಪರಿಹಾರ ಕೇಳುತ್ತಿದ್ದಾರೆ ಎಂದು ಪ್ರಾಧಿಕಾರ ವಾದಿಸಿದೆ. ಈ ಪ್ರಕರಣ ಇದೀಗ ಪರಿಸರ ನ್ಯಾಯಪೀಠದಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದ್ದು, ಭೂಕುಸಿತಕ್ಕೆ ನೈಸರ್ಗಿಕ ವಿಕೋಪವೇ ಕಾರಣವೇ ಅಥವಾ ನಿರ್ಮಾಣ ಕಾಮಗಾರಿಗಳ ಪ್ರಭಾವವೂ ಇದೆಯೇ ಎಂಬುದು ಮುಂದಿನ ವಿಚಾರಣೆಯಲ್ಲಿ ಸ್ಪಷ್ಟವಾಗುವ ಸಾಧ್ಯತೆ ಇದೆ.


