ಬೆಂಗಳೂರು: ಕೇಂದ್ರ ಸರ್ಕಾರ ಘೋಷಿಸಿರುವ 2025ರ ರಾಷ್ಟ್ರೀಯ ಪಂಚಾಯತ್ ಪ್ರಶಸ್ತಿಗಳಲ್ಲಿ ಕರ್ನಾಟಕ ಭಾರೀ ಸಾಧನೆ ಮಾಡಿದ್ದು, ರಾಜ್ಯದ ಆರು ಪಂಚಾಯತ್ಗಳು ರಾಷ್ಟ್ರ ಮಟ್ಟದ ಗೌರವಕ್ಕೆ ಆಯ್ಕೆಯಾಗಿವೆ. ಇದರೊಂದಿಗೆ ದೇಶದಲ್ಲೇ ಅತ್ಯಧಿಕ ಪ್ರಶಸ್ತಿ ಪಡೆದ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ.
ದೇಶಾದ್ಯಂತ ಒಟ್ಟು 42 ಪಂಚಾಯತ್ಗಳನ್ನು ವಿವಿಧ ವಿಭಾಗಗಳಡಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಆಂಧ್ರಪ್ರದೇಶ ಮತ್ತು ಒಡಿಶಾ ತಲಾ ಐದು ಪ್ರಶಸ್ತಿಗಳನ್ನು ಪಡೆದು ನಂತರದ ಸ್ಥಾನದಲ್ಲಿವೆ.
ಪ್ರಶಸ್ತಿ ಪ್ರದಾನ ಸಮಾರಂಭವು ಮುಂದಿನ ತಿಂಗಳ 3ರಂದು ನವದೆಹಲಿಯಲ್ಲಿ ನಡೆಯಲಿದ್ದು, ಪಂಚಾಯತ್ ರಾಜ್ ಸಚಿವಾಲಯ ಈ ಕುರಿತು ಅಧಿಕೃತ ಮಾಹಿತಿ ನೀಡಿದೆ.
ಈ ರಾಷ್ಟ್ರೀಯ ಪ್ರಶಸ್ತಿಗಳನ್ನು “ದೀನ್ ದಯಾಳ್ ಉಪಾಧ್ಯಾಯ ಪಂಚಾಯತ್ ಸತತ ಅಭಿವೃದ್ಧಿ ಪುರಸ್ಕಾರ” ಮತ್ತು “ನಾನಾಜಿ ದೇಶ್ಮುಖ್ ಸರ್ವೋತ್ತಮ ಪಂಚಾಯತ್ ಸತತ ಅಭಿವೃದ್ಧಿ ಪುರಸ್ಕಾರ” ಎಂಬ ಎರಡು ಪ್ರಮುಖ ವಿಭಾಗಗಳಡಿ ನೀಡಲಾಗುತ್ತಿದೆ.
ಜೀವನೋಪಾಯ ಅಭಿವೃದ್ಧಿ, ಆರೋಗ್ಯ ಸೇವೆ, ಶುದ್ಧ ಕುಡಿಯುವ ನೀರು, ಸ್ವಚ್ಛತೆ, ಮಹಿಳಾ ಸ್ನೇಹಿ ಆಡಳಿತ, ಸಾಮಾಜಿಕ ನ್ಯಾಯ ಹಾಗೂ ಸುಸ್ಥಿರ ಅಭಿವೃದ್ಧಿ ಗುರಿಗಳ ಸಾಧನೆಯಲ್ಲಿ ಉತ್ತಮ ಸಾಧನೆ ಮಾಡಿದ ಪಂಚಾಯತ್ಗಳನ್ನು ಆಯ್ಕೆ ಮಾಡಲಾಗಿದೆ.
ದೇಶದ 17 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 34 ಗ್ರಾಮ ಪಂಚಾಯತ್ಗಳು ಈ ಬಾರಿ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಪಡೆದಿವೆ. ಗ್ರಾಮೀಣ ಅಭಿವೃದ್ಧಿ ಮತ್ತು ಸ್ಥಳೀಯ ಆಡಳಿತದಲ್ಲಿ ಕರ್ನಾಟಕ ಪಂಚಾಯತ್ಗಳು ತೋರಿದ ಸಾಧನೆಗೆ ಇದೀಗ ರಾಷ್ಟ್ರಮಟ್ಟದ ಮಾನ್ಯತೆ ದೊರೆತಂತಾಗಿದೆ.



