ಗದಗ: ಗದಗ-ಬೆಟಗೇರಿ ಅವಳಿ ನಗರದಲ್ಲಿ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆ, ನಗರ ಸಂಚಾರ ಪೊಲೀಸರು ಟ್ರಾಫಿಕ್ ಸಿಗ್ನಲ್ಗಳಲ್ಲಿ ಹಸಿರು ಹೊದಿಕೆ ಅಳವಡಿಸಿ ವಾಹನ ಸವಾರರಿಗೆ ನೆರವು ನೀಡುತ್ತಿದ್ದಾರೆ.
ನಗರದ ಪ್ರಮುಖ ವೃತ್ತಗಳಾದ ಮುಳಗುಂದ ನಾಕಾ, ಭೂಮರೆಡ್ಡಿ ಸರ್ಕಲ್ ಸೇರಿದಂತೆ ಹಲವು ಟ್ರಾಫಿಕ್ ಜಂಕ್ಷನ್ಗಳಲ್ಲಿ ಪೊಲೀಸ್ ಇಲಾಖೆ ಹಾಗೂ ನಗರಸಭೆ ಸಹಯೋಗದಲ್ಲಿ ಈ ವ್ಯವಸ್ಥೆ ಕಲ್ಪಿಸಲಾಗಿದೆ.
ವಾಹನ ಸವಾರರಿಗೆ ತಂಪಿನ ಅನುಭವ
ಸಿಗ್ನಲ್ ಬಳಿ ನಿಲುಗಡೆಯಾಗುವ ವಾಹನ ಸವಾರರು ತೀವ್ರ ಬಿಸಿಲಿನಿಂದ ಸಂಕಷ್ಟ ಅನುಭವಿಸುತ್ತಿದ್ದರು. ಇದನ್ನು ಮನಗಂಡು ಹಸಿರು ಹೊದಿಕೆ ಅಳವಡಿಸಿ ನೆರಳಿನ ವ್ಯವಸ್ಥೆ ಮಾಡಲಾಗಿದೆ.
ಗದಗ ನಗರದ ವಾಹನ ಸವಾರ ಗುರುರಾಜ ಚವ್ಹಾಣ ಮಾತನಾಡಿ, ಗದಗದಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಹೆಚ್ಚುತ್ತಿದ್ದು, ಹೊರಗೆ ಬರುವುದು ಕಷ್ಟವಾಗಿತ್ತು. ಇಂತಹ ಸಂದರ್ಭದಲ್ಲಿ ಪೊಲೀಸರ ಈ ಕ್ರಮ ಸಂತಸ ತಂದಿದೆ ಎಂದು ಹೇಳಿದರು.
ಸಾರ್ವಜನಿಕರಿಂದ ಮೆಚ್ಚುಗೆ
ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಮಾತನಾಡಿ, ಟ್ರಾಫಿಕ್ ಸಿಗ್ನಲ್ಗಳಲ್ಲಿ ನಿಲ್ಲುವ ಸವಾರರು ಬಿಸಿಲಿನ ತಾಪದಿಂದ ಸಮಸ್ಯೆ ಎದುರಿಸುತ್ತಿದ್ದರು. ಹೀಗಾಗಿ ಹಸಿರು ಹೊದಿಕೆ ನಿರ್ಮಿಸಿ ನೆರಳು ಒದಗಿಸಲಾಗಿದೆ. ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ತಿಳಿಸಿದ್ದಾರೆ.
ಮಾದರಿಯಾದ ಪೊಲೀಸ್ ಇಲಾಖೆ
ಬೇಸಿಗೆಯ ಬಿಸಿಲಿನ ನಡುವೆ ಜನಸ್ನೇಹಿ ಕ್ರಮ ಕೈಗೊಂಡ ಗದಗ ಸಂಚಾರ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.



