ಕೋಲಾರ: ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಆರೋಗ್ಯ ಕಾಪಾಡುವ ಉದ್ದೇಶದಿಂದ ಕಾರ್ಮಿಕ ಇಲಾಖೆ ಆರಂಭಿಸಿರುವ ಸಂಚಾರಿ ಆರೋಗ್ಯ ಘಟಕಗಳು ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ ಪಡೆಯುತ್ತಿವೆ. ಕೆಲಸದ ಒತ್ತಡದಿಂದ ಆಸ್ಪತ್ರೆಗೆ ಹೋಗಲು ಸಾಧ್ಯವಾಗದ ಕಾರ್ಮಿಕರಿಗೆ ಇದೀಗ ಕೆಲಸದ ಸ್ಥಳದಲ್ಲೇ ಉಚಿತ ಆರೋಗ್ಯ ಸೇವೆ ದೊರೆಯುತ್ತಿದೆ.
ಕೋಲಾರ ಜಿಲ್ಲೆಯಲ್ಲಿ ಕಾರ್ಮಿಕ ಇಲಾಖೆಯಿಂದ ಮೂರು ಸಂಚಾರಿ ಆರೋಗ್ಯ ಘಟಕಗಳನ್ನು ನಿಯೋಜಿಸಲಾಗಿದ್ದು, ಅವು ಜಿಲ್ಲೆಯ ವಿವಿಧ ಭಾಗಗಳಲ್ಲಿ ಸಂಚರಿಸಿ ಕಾರ್ಮಿಕರಿಗೆ ತಪಾಸಣೆ ಹಾಗೂ ಚಿಕಿತ್ಸೆ ನೀಡುತ್ತಿವೆ.
ಮುಳಬಾಗಿಲು ತಾಲೂಕಿನ ಯಳಗೊಂಡಹಳ್ಳಿ ಗ್ರಾಮದಲ್ಲಿ ಸಂಚಾರಿ ಘಟಕದ ಮೂಲಕ ಕಾರ್ಮಿಕರಿಗೆ ಆರೋಗ್ಯ ತಪಾಸಣೆ ನಡೆಸಲಾಗಿದ್ದು, ರಕ್ತದೊತ್ತಡ, ಕಣ್ಣಿನ ಪರೀಕ್ಷೆ ಸೇರಿದಂತೆ ಸಾಮಾನ್ಯ ಆರೋಗ್ಯ ತಪಾಸಣೆಗಳನ್ನು ಉಚಿತವಾಗಿ ಮಾಡಲಾಯಿತು.
ಕಾರ್ಮಿಕರು ದಿನಪೂರ್ತಿ ದುಡಿಯುವ ಕಾರಣ ಆಸ್ಪತ್ರೆಗೆ ತೆರಳಲು ಸಮಯ ಸಿಗದ ಪರಿಸ್ಥಿತಿ ಇರುವುದರಿಂದ, ಸಂಚಾರಿ ಚಿಕಿತ್ಸಾಲಯಗಳು ನೇರವಾಗಿ ನಿರ್ಮಾಣ ಸ್ಥಳಗಳಿಗೆ ತೆರಳಿ ಆರೋಗ್ಯ ಸೇವೆ ನೀಡುತ್ತಿರುವುದು ಕಾರ್ಮಿಕರಿಗೆ ದೊಡ್ಡ ನೆರವಾಗಿದೆ.
ಕೂಲಿ ಕಾರ್ಮಿಕ ಶ್ರೀನಿವಾಸ್ ಮಾತನಾಡಿ, “ಪ್ರತಿ ತಿಂಗಳು ನಮ್ಮ ಊರಿಗೆ ಸಂಚಾರಿ ಘಟಕ ಬರುತ್ತಿದೆ. ಇದರಿಂದ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲು ಅನುಕೂಲವಾಗಿದೆ” ಎಂದರು.
ಕಾರ್ಮಿಕೆ ಯಲ್ಲಮ್ಮ, “ಅನಾರೋಗ್ಯದಿಂದ ಬಳಲುತ್ತಿದ್ದಾಗ ಸಂಚಾರಿ ಘಟಕದಲ್ಲೇ ಚಿಕಿತ್ಸೆ ಮತ್ತು ಔಷಧ ದೊರೆಯಿತು. ಇದು ನಮಗೆ ಬಹಳ ಸಹಾಯವಾಗಿದೆ” ಎಂದು ಹೇಳಿದರು.
ಒಡಿಶಾದಿಂದ ಬಂದು ಕೆಲಸ ಮಾಡುತ್ತಿರುವ ಕಾರ್ಮಿಕ ಗೋಪಿನಾಥ್ ಮುಂಡಾ, “ಕೆಲಸದ ಸ್ಥಳಕ್ಕೇ ವೈದ್ಯರು ಬಂದು ಚಿಕಿತ್ಸೆ ನೀಡುತ್ತಿರುವುದು ಕಾರ್ಮಿಕರಿಗೆ ತುಂಬಾ ಉಪಯುಕ್ತ” ಎಂದು ಅಭಿಪ್ರಾಯಪಟ್ಟರು.
ಸಂಚಾರಿ ಘಟಕದ ವೈದ್ಯ ಡಾ. ಪ್ರವೀಣ್ ಮಾತನಾಡಿ, “ಸ್ಥಳದಲ್ಲೇ ತಪಾಸಣೆ ಮಾಡಿ ಅಗತ್ಯ ಚಿಕಿತ್ಸೆ ನೀಡಲಾಗುತ್ತದೆ. ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದರೆ ಸಮೀಪದ ಆಸ್ಪತ್ರೆಗಳಿಗೆ ಶಿಫಾರಸು ಮಾಡಲಾಗುತ್ತದೆ” ಎಂದು ತಿಳಿಸಿದರು.
ಒಟ್ಟಾರೆಯಾಗಿ, ದಿನವಿಡೀ ದುಡಿಯುವ ಕಾರ್ಮಿಕರಿಗೆ ಮನೆಬಾಗಿಲಲ್ಲೇ ಆರೋಗ್ಯ ಸೇವೆ ತಲುಪಿಸುತ್ತಿರುವ ಸಂಚಾರಿ ಆರೋಗ್ಯ ಘಟಕಗಳು, ಕಾರ್ಮಿಕರ ಆರೋಗ್ಯ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ.



